ಶನಿವಾರ, ಮಾರ್ಚ್ 5, 2011

ಜೂಟ್ ಬೋಲತೀ ಹೇ ಸಾಲಿ 'ಆಮ್ ಆದಮೀ ಕಾ ಸರ್ಕಾರ್ ಹೇ!!!



'ಯೇ ಆಮ್ ಆದ್ಮಿ ಕಾ ಸರ್ಕಾರ್ ಹೇ'  ಎಂದೇ ಶುರುವಾಗುತ್ತದೆ ಈಕೆಯ ( ಕೈ-ಹೈಕಮಾಂಡ್) ಮಾತು. ನೆರೆದಿರುವ ಮುಗ್ದ  ಜನರತ್ತ ಕೈ ಬೀಸಿ ಈಕೆ ಹೆಜ್ಜೆ ಕೀಳುತ್ತಿದ್ದರೆ ಜನ ಮರುಳೋ - ಜಾತ್ರೆ ಮರುಳೋ
ಎಂಬಂತಿರುತ್ತದೆ  ಸನ್ನಿವೇಶ. ಬೆಲೆಯೇರಿಕೆಯ ಗದ್ದಲ ಎದ್ದಿರುವ ಸಂದರ್ಭ ನೆನಪಾದದ್ದು ಈಕೆಯ  'ಆಮ್  ಆದ್ಮಿ  ಘೋಷಣೆ !'.
ಈಗ ಮೂರು ವರ್ಷ ಹಿಂದೆ ಇದ್ದ ಬೆಲೆಗೂ ಈಗಿನ ಬೆಲೆಗೂ ತುಲನೆ ಮಾಡಿ ನೋಡಿ. ಹುಷಾರು ಹೈ _ಬೀಪಿ,  ದುರ್ಬಲ ಹ್ರದಯದವರು ಈ ಸಾಹಸಕ್ಕೆ ಕೈ ಹಾಕಬೇಡಿ!!. ಅರೆ ಇದೇನಿದು ನೀವುಕೂಡ ಹೌಹಾರಿದಿರಾ?.
-ಇರಲಿಕ್ಕಿಲ್ಲ ಯಾಕಂದ್ರೆ ಯು.ಪಿ.ಎ  ಸರ್ಕಾರ ಸಾಕಷ್ಟು ಬಾರಿ ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡಿದೆ; ಅಚ್ಚರಿಯಿನ್ನೆಲ್ಲಿಂದ!.
 ಬಾಯಲ್ಲಿ ಬೆಣ್ಣೆ ಬಗಲಲ್ಲಿ ದೊಣ್ಣೆ!. ಅಷ್ಟೇ ಕಣ್ರೀ.

ಇಲ್ಲಿ ಸರ್ಕಾರ ರಚನೆಯಾಗುವುದು ಹೇಗೆ ಎಂಬ ಕಡೆ ಒಮ್ಮೆ ಗಮನಿಸುವ ಅಗತ್ಯವಿದೆ; ಒಂದಿಷ್ಟು ಮತ(ವೋಟು),  ಇನ್ನೊಂದಿಷ್ಟು ಸ್ವಂತ ಲಾಭಕ್ಕೆ ತಮ್ಮನ್ನು ಮಾರಿಕೊಳ್ಳಲು ರೆಡಿ ಇರುವ ಚಿಲ್ಲರೆ ಪಕ್ಷಗಳ ಬೆಂಬಲವಿದ್ದರೆ ಸಾಕು, ಇಲ್ಲಿ ದೊಡ್ಡ ಗಾತ್ರದ ಕತ್ತೆ ಕೂಡ ಸರ್ಕಾರ ರಚನೆ ಮಾಡಿ ಆಡಳಿತ  ನಡೆಸ ಬಹುದಾದ ಪರಿಸ್ಥಿತಿ  ಇದೆ.....!.
ಅದಕ್ಕೇ ಸ್ವಾತಂತ್ರ್ಯಾನಂತರ ದೇಶವನ್ನ ಆಳಿದ ಪಟಾಲಂ ಇಂದು ಕೂಡ ಅಧಿಕಾರದಲ್ಲಿರುವುದು, ಜನತೆಯ ಮೇಲೆ ತೆರಿಗೆಯ
ದುಬಾರಿ ಬರೆಯನ್ನು ಹಾಕುತ್ತಿರುವುದು.  ಎಲ್ಲಿಯವರೆಗೆ ಈ ಸರ್ಕಾರವಿರುತ್ತದೆಯೋ ಅಲ್ಲಿಯವರೆಗೆ ಆಮ್ ಆದ್ಮಿ  ಹಾಗೆಯೆ
ಇರುತ್ತಾನೆ ಹಾಗು ಆತ ವೋಟ್ ಬ್ಯಾಂಕ್  ರಾಜಕಾರಣಕ್ಕೆ ಬಲಿಯಾಗುತ್ತಾನೆ. ಮತ್ತದೇ ಆಮ್ ಆದ್ಮಿ ಗೋಷಣೆ;
ಆಮ್ ಆದ್ಮಿ ಸರ್ಕಾರ. ಹೇಗಿದೆ ಭಾರತದ ರಾಷ್ಟೀಯ ಪಕ್ಷವೊಂದರ ರೆಗ್ಯುಲರ್ ಗುಪ್ತ್-ಗುಪ್ತ್  ಪ್ರನಾಳಿಕೆ !?.
ಚುನಾವಣೆಗೆ ಮುಂಚೆ ತೋರಿಸಿದ್ದ ಪ್ರನಾಳಿಕೆ ಬೇರೆಯದೇ ಇರತ್ತೆ ಬಿಡಿ !!!,

ಒಂದು ಉದಾಹರಣೆ: ೩ರೂಪಾಯಿಗೆ ಕೆಜಿ ಅಕ್ಕಿ; ಅಬ್ಬಾ ಎಂಥ ಯೋಜನೆ ಸರ್ಕಾರದಿಂದ ಅನ್ನಿಸಬಹುದು -ಅದನ್ನ ಪಡೆಯುವವರು ಈ ಸರ್ಕಾರವೇ 'ಬಡತನ-ರೇಖೆ' ಎಂದು ಎಳೆದಿರುವ ಗೆರೆಗಿಂತ ಕೆಳಗಿರುವವರು .
ಈ ಗೆರೆಯ ಕೆಳಗಿರುವವರಿಗಿಂತ ದಿನನಿತ್ಯದ ಬೇಕು ಬೇಡಗಳಿಗೆ ಬಡಿದಾಡುವ, ಮುಂದಿನ ಖರ್ಚಿಗೆಂದು ಇಂದು  ಹೊಟ್ಟೆ -ಬಟ್ಟೆ ಕಟ್ಟಿ ಕೂಡಿಡುವ ದೊಡ್ಡ ವರ್ಗವಿದೆಯಲ್ಲ ಅವರಿಗೇನು ಮಾಡಿದೆ ಸರ್ಕಾರ, ಬಹುಶಃ ಅವರನ್ನೆಲ್ಲ ಅಮೀರ್ (ಶ್ರೀಮಂತ )ಅಂದುಕೊಂಡಿರಲಿಕ್ಕೆ ಸಾಕು ಅಥವಾ ಅವರು ಹೇಗೋ ಜೀವನ ನಡೆಸುತ್ತಾರೆಂಬ ತಾತ್ಸಾರವೇ?. ಮಧ್ಯಮ ವರ್ಗ ಯಾವತ್ತು
ನಮಗೆ ಈ ಸೌಕರ್ಯ ಕೊಡಿ ಎಂದು ದುಂಬಾಲು ಬಿದ್ದಿಲ್ಲ, ಅದು ವ್ಯವಸ್ಥೆಗೆ ಅನುಗುಣವಾಗಿ ತಮ್ಮ ಪಾಡಿಗೆ ತಾನು ಜೀವನ
ಸಾಗಿಸುತ್ತಲಿದೆ: ಎಂದಿನಂತೆ!.

ಗಾಂಧೀ ತತ್ವಗಳು, ಸ್ವಾತಂತ್ರ್ಯಹೋರಾಟಗಾರರ ಹಿನ್ನೆಲೆ ಇವೆಲ್ಲ ಇಂದು ದೇಶ ಆಳುತ್ತಿರುವ ಪಕ್ಷವೊಂದರ ಜಾಹೀರಾತಿನ
ಸರಕಾಗಿರುವುದು ನಮ್ಮದೌರ್ಭಾಗ್ಯ. ಈಬಗ್ಗೆ ಅನುಮಾನಗಳಿದ್ದರೆ ನಮ್ಮೊಂದಿಗಿರುವ ಸ್ವಾತಂತ್ರ್ಯಹೋರಾಟಗಾರರನ್ನೊಮ್ಮೆ
ಮಾತನಾಡಿಸಿ, ಅವರ ನೋವು ಮನಕಲಕುವಂತದ್ದು. ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ವೋಟ್ ಬ್ಯಾಂಕ್ ಎಂಬ ಕೆಟ್ಟ
ಸಂಪ್ರದಾಯ ಎಲ್ಲ ಪಕ್ಷಗಳನ್ನು ತಟ್ಟಿದ್ದರೂ, ಅದನ್ನ ಬೆಳೆಸುತ್ತಿರುವುದು ಈ ದೊಡ್ಡ  ಪಕ್ಷವೇ . ಅದಕ್ಕೆಲ್ಲ ಸಾಕ್ಷಿಯೆಂಬಂತೆ
ಇರುವುದು ಮೀಸಲು ಸೌಕರ್ಯ, ಎಂದಿಗೋ ಕೊನೆಯಾಗಬೇಕಿದ್ದ ಮೀಸಲಾತಿ ಸೌಲಬ್ಯ ಈಗ ಅದನ್ನ ಪಡೆಯುತ್ತಿರುವವರ
ಒಲೈಕೆಗೊಸ್ಕರ ಇನ್ನೂ ಜೀವಂತವಾಗಿದೆ. ಬಹುಶಃ ಮುಂದೆ ಬರುವ ಸರ್ಕಾರಗಳು ಕೂಡ ಅದಕ್ಕೆ ಮುಕ್ತಿ ಕಾಣಿಸುವ ಧೈರ್ಯ
ತೋರಿಸಲಾರವು, ವೋಟ್-ಬ್ಯಾಂಕ್ ಎಲ್ಲಿ  ಕೈ ತಪ್ಪೀತೆಂಬ ಭಯವೇ ಇಷ್ಟಕ್ಕೆಲ್ಲ ಕಾರಣ!.
ಜಾತಿವಾರು ವೋಟ್-ಬ್ಯಾಂಕ್ ಸೃಷ್ಟಿ ಮಾಡಿಕೊಂಡು ಇವತ್ತಿಗೂ ಪೋಷಣೆ ಮಾಡಿಕೊಂಡು ಬರುತ್ತಿರುವ ಈ ರಾಜಕೀಯ ಪಕ್ಷಗಳಿಗೆ  ಎಂದು  ಬುದ್ದಿಬರುವುದೋ?.

ನೋಡುಗರ ದೃಷ್ಟಿಯಲ್ಲಿ ಒಳ್ಳೆಯವರೆನಿಸಿಕೊಂಡ  ಒಂದಷ್ಟು ಜನರನ್ನ ಎದುರಿಗೆ ಇಟ್ಟುಕೊಂಡಿರುವ 'ಹಸ್ತ' ಮಾರ್ಕಿನ
ಹೈಕಮಾಂಡ್''ನ ಜಾಣತನ ಮೆಚ್ಚಲೇಬೇಕಾದ್ದು. ಏನು ಅರಿಯದಂತಿರುವ ಪ್ರಧಾನಿ, ಕೊಂಚ ಇಮೇಜ್ ಇರುವ(?)
ಗೃಹಮಂತ್ರಿ ಇವರೆಲ್ಲ ಎದುರಿಗಷ್ಟೇ; ನಿಜವಾದ ರಾಜಕಿಯ ನಡೆಸುತ್ತಿರುವುದು ಹೈಕಮಾಂಡ್ ಎಂಬುದೇನು ಗುಟ್ಟಾಗಿ ಉಳಿದಿಲ್ಲ!.
ಇನ್ನುಳಿದಿರುವ ನಾಯಕರುಗಳೂ ಅಷ್ಟೇ ಎಲ್ಲರೂ ಈಕೆಯ ಆಣತಿಗೆ ತಲೆದೂಗುವ ತೊಗಲು ಬೊಂಬೆಗಳೇ. 
ಅಧಿಕಾರದ ಆಸೆಯಿಂದ ಮಾತು ಮಾತಿಗೂ ಹೈಕಮಾಂಡ್ ಕಡೆ ಮುಖ ಮಾಡುವಲ್ಲಿ ನಮ್ಮ ರಾಜ್ಯದ 'ಕೈ' ನಾಯಕರು
ಸಿದ್ದ'ಹಸ್ತ'ರು.

ಊಟದ ಅಕ್ಕಿಯಬೇಲೆಯೇ ಗಗನಕ್ಕೆರಿರುವಾಗ ಅತ್ತ ಕಡೆಗೆ ಕೊಂಚ ಗಮನಹರಿಸಬೇಕಾದ ತುರ್ತು ಜನರ ಎದುರಿಗಿದೆ.
ಇವೆಲ್ಲದರ ನಡುವೆಯೇ ಅಡುಗೆ ಅನಿಲದ ಬೆಲೆ ಮೇಲಿಂದ ಮೇಲೆ ಏರಿಕೆಯಾಗುತ್ತಲೇ ಇದೆ. ಇಂದು ಜನ ಸಾಮಾನ್ಯರ
ಮನೆಯಲ್ಲಿ ಕೂಡ ಅಡುಗೆ ಬೇಯುತ್ತಿರುವುದು ಕೂಡ ಎಲ್ .ಪಿ .ಜಿ ಯಿಂದ. ಪರಿಸ್ಥಿತಿ ಹೀಗಿರುವಾಗ ಪದೇ-ಪದೇ
ಬೆಲೆಯೇರಿಕೆಯ ಬರೆಯನ್ನ ಹಾಕುತ್ತಿರುವುದು ಎಷ್ಟು ಸೈ? ಹೈಕಮಾಂಡ್!..  ಇವೆಲ್ಲ ರಾಷ್ಟ್ರ-ಮಟ್ಟದಲ್ಲಿ ನಡೆವ
ಲಾಬಿಗಳಾದ್ದರಿಂದ ಈ ಕುರಿತು ಹೇಗೆಲ್ಲ ಕೇಳುತ್ತ ಇರುವುದು  ತಪ್ಪು-ತಪ್ಪು !.

ಆದರೂ ಹೀಗೊಂದು ಮೆಸ್ಸೇಜು ಇನ್ -ಬಾಕ್ಸ್ ಸೇರಿದಾಗ ಎಂಥವನಿಗಾದರೂ ಒಮ್ಮೆ ತಲೆ ಕೆಡುತ್ತದೆಯಲ್ಲವೇ?-

ಪೆಟ್ರೋಲ್ ಬೆಲೆ ಕೆಳಕಂಡ ದೇಶಗಳಲ್ಲಿ;
ಬಾಂಗ್ಲಾ :22,
ಕ್ಯೂಬಾ  :19,
ನೇಪಾಳ :34,
ಕತಾರ್ : 30,
ಪಾಕ್ :26 ,
ಭಾರತ :53....
ಮೂಲ ಬೆಲೆ ಪ್ರತಿ ಲೀಟರ್ 'ಗೆ - 16.50, ಕೆಂದ್ರ ತೆರಿಗೆ-11.80, ಅಬಕಾರಿ ಸುಂಕ-9.45, ರಾಜ್ಯತೆರಿಗೆ -8.00, ವ್ಯಾಟ್ -4,
ಒಟ್ಟು :50.50....ಈಗ 3 ರುಪಾಯಿ ಹೆಚ್ಚಳ_ಜನ ಮೆಚ್ಚುವ ಕೆಲಸ ಬಾರತ ಸರ್ಕಾರದಿಂದ!.
'ಅಂದಹಾಗೆ ಇದು ವರ್ಷದ ಹಿಂದಿನ ಹಳೆಯ ಮೆಸೇಜು, ಆಮೇಲೆ ಅದೆಷ್ಟು ಬಾರಿ ಏರಿಕೆಯಾಗಿದೆಯೋ ಬಗವಂತ ಬಲ್ಲ!'.
ಈ ರೀತಿಯಾಗಿ ಸಾಗುತ್ತದೆ ಆ ಮೆಸೇಜಿನ ದಾಟಿ. ಇಲ್ಲಿ ನೀಡಿರುವ ಅಂಕಿ ಅಂಶಗಳು ಸರಿಯಗಿವೆಯೋ ಏನೋ ಗೊತ್ತಿಲ್ಲ, ಆದರೆ ತುಂಬಾ ಜನರ ಇನ್-ಬಾಕ್ಸ್ ಅಂತು ತಲುಪಿದೆ. 

ತೊಗರಿ ಬೆಲೆ ತೊಂಬತ್ತು ತಲುಪಿ ಒಂಬತ್ತು ತಿಂಗಳಾಯ್ತು , ಆಮೇಲೆ ನೂರಾಯ್ತು ಈಗ ಎಷ್ಟಿದೆ ಎಂದು ಒಮ್ಮೆ ತಲೆ 
ಕೆಡಿಸಿಕೊಳ್ಳುತ್ತೇವೆಯಾದರೂ ಆಮೇಲೆ ಸುಮ್ಮನಾಗಿಬಿಡುವುದು ನಮ್ಮ ಜಾಯಮಾನ.
ಯಾಕಂದರೆ ಪಕ್ಕದ ಮನೆಯಲ್ಲಿ ಬೇಯುತ್ತಿರುವುದು ಕೂಡ ಅಷ್ಟೇ ರೊಕ್ಕ ಕೊಟ್ಟಿರುವ ಬೇಳೆ ತಾನೇ!!.

ಇತಿಪಂಚ್: ತೀರ ತಿನ್ನುವ ವಸ್ತುಗಳ ಬೆಲೆ ಹೆಚ್ಚಳಮಾಡಿ ಆಮ್ ಆದ್ಮಿಗಳ ಸಂಖ್ಯೆಯನ್ನ ಜಾಸ್ತಿಮಾಡುತ್ತಿರುವುದೇ
(ಕಾಣದ ಕೈ!) ಸರ್ಕಾರದ ಸಾದನೆ ಅನ್ನೋಣ ಅಲ್ಲವೇ!?.

ಏನಂತೀರಿ?


ಈ ಲೇಖನ ಶಿರಸಿಯ ವೆಬ್ಸೈಟ್ ನಲ್ಲಿ ಪ್ರಕಟಗೊಂಡಿದೆ-ಲಿಂಕ್ ಈ ಕೆಳಗಿನಂತಿದೆ ಬೆಟ್ಟಿ ಕೊಡಬಹುದು http://sirsi.in/kannada/index.php?option=com_content&view=category&layout=blog&id=37&Itemid=54

ಶುಕ್ರವಾರ, ಮಾರ್ಚ್ 4, 2011

ಹನಿಗವಿತೆಗಳು

ಹನಿಗವಿತೆಗಳು/ಹೈಕುಗಳು

1)ಪಾರು

ಕೈಯ ಕೊಟ್ಟಳು ಹುಡುಗಿ
ಕಂಗೆಟ್ಟ  ಹುಡುಗ,
ಅಯ್ಯೋ ಎಲ್ಲ ಮುಗಿದೇ
ಹೋಯಿತೆಂದರು ಜನ.
ಅಸಲಿಗೆ ಹುಡುಗ ಬಚಾವಾಗಿದ್ದ!

2)ಜೀವ

ಅಕ್ವೆರಿಯಮ್ಮಿನಿಂದ
ಚಿಮ್ಮಿದ  ಮೀನು
ಹೊರಗೆ ಏನು ಇಲ್ಲವೆಂಬ
ಸತ್ಯವ ಅರಿತು
ಮತ್ತೆ ನೀರಿಗೆ ಹಾರಿತು!

3)ಸೌಂದರ್ಯ ಪ್ರಜ್ಞೆ

ಬ್ಯೂಟಿ - ಪಾರ್ಲರಿನಿಂದ 
ಬಂದ ಬೆಡಗಿಯ
ಕೈಯ ಹಿಡಿದು
ಮೊಮ್ಮಗ
ಮನೆಗೆ ಕರೆದೊಯ್ದ!

4)ಗಡಿಯಾರ

ವರ್ಷಗಟ್ಟಲೆ  ತಿರುಗಿತು
ಗಡಿಯಾರದ ಮುಳ್ಳು,
ಎಷ್ಟು ಸುತ್ತಿದರೂ
ತಲುಪಿದ್ದು ಮೊದಲಿದ್ದಲ್ಲಿಗೇ
ಎನಿಸಿರಬೇಕು ಪಾಪ!...
ಸ್ತಬ್ಧವಾಯಿತು!

ಈ ಕವನಗಳು ಶಿರಸಿಯ ವೆಬ್ಸೈಟ್ ನಲ್ಲಿ ಕೂಡ ಪ್ರಕಟಗೊಂಡಿವೆ-
ಲಿಂಕ್ ಈ ಕೆಳಗಿನಂತಿದೆ ಬೆಟ್ಟಿ ಕೊಡಬಹುದು -

http://sirsi.in/kannada/index.php?option=com_content&view=article&id=250:2011-03-06-12-10-17&catid=38:blog2&Itemid=66