ಶನಿವಾರ, ಡಿಸೆಂಬರ್ 31, 2011

ಗೆಳೆಯರೇ ತಮಗೆಲ್ಲರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು!
೨೦೧೨ ನಿಮಗೆಲ್ಲರಿಗೂ ಜಯವನ್ನ ತರಲೆಂದು ಹಾರೈಸುವ

                                                                                -













                                               ನಿಮ್ಮವನೇ ಆದ : ಗುರುಪ್ರಸಾದ ಹೆಗಡೆ 

ಮಂಗಳವಾರ, ಡಿಸೆಂಬರ್ 6, 2011

ಅರ್ಥ ಮಾಡ್ಕೋ!

ನಿರಂತರ ಅಂತರ
ಇಬ್ಬರಿಗೂ ಒಳಿತಲ್ಲ,
ಅತಿಯಾದ ಪರಿತಪನೆಯ
ತಪ್ಪು ತಿಳಿಯಬೇಡ,
ಆರಾದನೆಗೂ ಮಿತಿಯಿದೆ
ತೀರ ಕಾಯಿಸಬೇಡ,
ಮಾಡಿಬಿಡುವೆ ಪ್ರೀತಿಯ
'ಉದ್ಯಾಪನೆ' 
ಸಾಕೆನಿಸಿದೆ ನನಗೂ
ನಿನ್ನ ಉಪಾಸನೆ!   
   

  

ಅಸಹನೆ

ಹಾಳು ಕವಿತೆಗಳು
ಹುಟ್ಟುವ ಸಮಯದಲ್ಲಿ
ನೀಡುವ ಯಾತನೆಗೆ
ನಾನು ಬೇಸರಗೊಂಡಿಲ್ಲ;
ಇಷ್ಟಕ್ಕೆಲ್ಲ ಕಾರಣವಾಗಿರುವ
ನನ್ನ ಹೃದಯದ ಮೇಲೆಯೇ
ನನಗೆ ಕೋಪವಿದೆ!  
 

   

ಎಚ್ಚರಿಕೆ!

ನೀನಿಲ್ಲದ ರಾತ್ರಿಗಳಲ್ಲಿ
ಒಬ್ಬನೇ ಕುಳಿತು
ಬರೆದ ಅದೆಷ್ಟೋ
ಕವಿತೆಗಳು,
ನನ್ನ ಪಾಲಿನ
ಸಾಕಷ್ಟುಸಮಯವನ್ನ
ಹಾಳು ಮಾಡಿವೆ!
ಸುಮ್ಮನೆ ಬಂದುಬಿಡು.

-ನಿನ್ನವ
 
 

  

Day We Fell In Love!

I did remember the day
We are only there
Under clear blue sky
I tried to take out my eye
But I couldn't, don't know why?

Am sure my dear
You are not shy that day
That's why I continued.

The rain stopped
Air paused
Sun blinked his eye
Yeah we fall in love
That day even God said "Wow"

- Prasad Hegde









ಶನಿವಾರ, ನವೆಂಬರ್ 26, 2011

ಕನಸು


ನಿತ್ಯ ಕನಸು ಕಳಿಸುವವ
ಒಮ್ಮೆಲೇ ಸುಮ್ಮನಾದ,
ನಿಜವಾದ ಕನಸಿಗನೊಬ್ಬ
ನಿದ್ದೆಯಿಲ್ಲದೆ ನಲುಗಿದ.....
ಜಾವದ ಕನಸು ನನಸಾದೀತೆಂದು
ಏಳದೆ ಹಾಗೆಯೇ ಮಲಗಿದ!







'ಕನಸಿಗ'

ಕನಸುಗಳ ಬೆನ್ನೇರಿ
ಹೋದ.........
ಎಲ್ಲಿ ಇಳಿದನೋ,
ಉಳಿದನೋ / ಅಳಿದನೋ?
ಪೇಪರಿನಲ್ಲಿ ಬಂತು
'ಕಾಣೆಯಾದ'.


'ಕೂಸು'

ಹುಟ್ಟಿದ ಕೂಡಲೇ
ಅಳಲೇ ಬೇಕು
ಹಸುಗೂಸು.
ಅರಿವಳು ತಾಯಿ
ಮಗು ಅತ್ತರೆ,
ಹಸಿದಿದೆ ಕೂಸು.















ಬುಧವಾರ, ಅಕ್ಟೋಬರ್ 26, 2011

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಗೆಳೆಯರೇ,  
ನಿಮಗೂ ಮತ್ತು ನಿಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಇವತ್ತು ರಾತ್ರಿ ಪ್ರಯಾಣ ಬೆಳೆಸಿ ನಮ್ಮೂರು ಸಿರ್ಸಿಗೆ ಹೋಗಿ, ನವೆಂಬರ್ ೨ರಂದು ಬರುತ್ತೇನೆ.

'ಕಡಿಮೆ ಪಟಾಕಿ ಹುಚ್ಚು; ಹೆಚ್ಚು ಹಣತೆಯ ಹಚ್ಚು' ಇದು ನಮ್ಮೆಲ್ಲರ ಆದ್ಯತೆಯಗಲೆಂದು ಆಶಿಸುತ್ತ, 

ಹೊರಡಲು ಅನುವಾಗುತ್ತಿದ್ದೇನೆ :)

                                                             -ನಿಮ್ಮ ಪ್ರೀತಿಯ, ಗುರುಪ್ರಸಾದ ಹೆಗಡೆ.





ಗುರುವಾರ, ಅಕ್ಟೋಬರ್ 6, 2011

ಮೋಡ ಕಟ್ಟೋದು ಆವಿಯಲ್ಲೇ; ಪ್ರೀತಿ ಹುಟ್ಟೋದು ಕಣ್ಣಿನಲ್ಲೇ!




ಸಂಜೆ ಆರಕ್ಕೆ ಬೆಟ್ಟದ ನೆತ್ತಿಯ ಮೇಲೆ ನಿಂತಿದ್ದೆ; ಎತ್ತ ನೋಡಿದರತ್ತ ಮುತ್ತಿನಂತ ಮಳೆಹನಿ! ಸಂಜೆ ಮಳೆಯು ಮಲೆನಾಡ ಕನ್ನೆಲವನ್ನ ತೋಯ್ದು ತಂಪಾಗಿಸಿದ್ದವು, ಸೂರ್ಯ ಕರಗಿದಷ್ಟೂ-ಮಂಜು ಮೆರಗು ಪಡೆಯ ಹತ್ತಿತ್ತು. ಆಗಸದೆಡೆಗೆ ಧನ್ಯವಾದ ಹೇಳಿ ಹೊರಟಿದೆ ಆವಿ, ನಾನಗಿದ್ದೆ ಮುಸ್ಸಂಜೆಯಲ್ಲಿ ಅಕ್ಷರಶಃ ಕವಿ.

ನವನೀತದಂತ ವಿನೀತ ಮೋಡಗಳ ನಡುವೆ ಮಿಂಚಿನ ಸಂಚಲನ. ಸುಖವನ್ನ ಸುರಿದುಕೊಂಡ ಮಲೆನಾಡಿನ ಒಡಲಿನದ್ದು ಕೃತಾರ್ಥ ಭಾವ; ವಾತಾವರಣದ ತುಂಬೆಲ್ಲ ಸಂತಸದ ತೇವ. ಶುಭ್ರ ಆಗಸಕ್ಕೆ ಸೂರ್ಯನ ವಿದಾಯ ಸಂದಾಯವಾಗುತ್ತಿದೆ, ಭೂಮಿಯದು ಮಾತ್ರ ಒಲ್ಲದ ಮನಸ್ಸಿನ ಮೆಲ್ಲನೆ ಬೀಳ್ಕೊಡುಗೆ! ನಕ್ಷತ್ರ ಮೂಡುವ ಸಮಯಕ್ಕೂ ಮುಂಚೆ ಭೂಮಿಯದ್ದು 
ಎಂದಿನಂತೆಯೇ ಅಪ್ಪಟ ನಾಚಿಕೆ! ಮಳೆಯಲ್ಲಿ ಮಿಂದ ತಂಗಾಳಿ ಎಂದಿಗಿಂತ ಕೊಂಚ ಬಿರುಸು. ಮಣ್ಣಿನ ಘಮವನ್ನೆಲ್ಲ
ಒಳಗೊಂಡುಬಿಡುವ ರಭಸವಿರಬೇಕು. ತೊಯ್ದ ತರಗೆಲೆಗಳಿಂದ ತೊಟ್ಟಿಕ್ಕುವ ಹನಿಗೆ ಮಣ್ಣ ಮಡಿಲ ಸೇರುವ ತವಕ,
ಮಣ್ಣ ಕಣ ಕಣಕ್ಕೂ ಮನಮೋಹಕ ಪುಳಕ. ಪಟ ಪಟನೆ ರೆಕ್ಕೆ ಬಡಿವ ಚಿಟ್ಟೆಗಳೂ, ಬಾನಂಗಳದ ಒಡನಾಡಿ ಬಾನಾಡಿಗಳು 
ಗೂಡ ಸೇರ-ಹೊರಟಿವೆ. ನವಿಲ ಕೇಕೆ ನಿಂತಿದೆ! 

ಇಂತಿರಲು ಮಳೆ- ಜಿರಳೆ ಮಾತ್ರ ಸುಮ್ಮನಿರದು; ಅದರ ವಿರಹವ ಅರಿಯುವರಾರಿಲ್ಲ! ನಿಂತ ಮಳೆಯೆಡೆಗಿನ ನಿರಂತರ 
ಧಿಕ್ಕಾರ : ಕೋಪಿಸಿಕೊಂಡ ಪ್ರೇಮಿಯ ತಿರಸ್ಕಾರದಂತಿದೆ! ಸುರಿವ ಮಳೆ ಹಾಗು ಅವಿಯೊಡಲಲಿ ಹುಟ್ಟುವ ಮೋಡ ಇವೆರಡು ಪರಸ್ಪರರ ಪ್ರೇಮ ನಿವೇದನೆ. ಅಂತೆಯೇ ಅವನ ಕಂಗಳ ಯಾಚನೆ; ಇವಳ ಕಂಗಳ ಸಂಕೋಚ ಇವೆರಡೂ ಹೇಳುತ್ತಿವೆ:
     
"ಮೋಡ ಕಟ್ಟೋದು ಆವಿಯಲ್ಲೇ; ಪ್ರೀತಿ ಹುಟ್ಟೋದು ಕಣ್ಣಿನಲ್ಲೇ!"







ಶನಿವಾರ, ಸೆಪ್ಟೆಂಬರ್ 17, 2011

'ಪರಿ' ಬಿ.ಡಿ.ಟಿ ಅಭಿಯಂತರರ ಚಿತ್ರದ 'ಹಾಡು ಹಬ್ಬ ಸಂಭ್ರಮ' ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿ ಬಂದೆವು.
ಮನಸಿಗೆ ಹಿತ ನೀಡುವ ತುಂಬ ಒಳ್ಳೆಯ ಹಾಡುಗಳು ಮೂಡಿಬಂದಿವೆ. ನಾಗತಿಹಳ್ಳಿ ಚಂದ್ರಶೇಖರ ಅವರು ಹೇಳಿದಂತೆ ಸುಧಿರಾಜ್ ಅತ್ತಾವರರ ಗೀತ ಸಾಹಿತ್ಯ, ಹಳೆಯ ಮಾಧುರ್ಯದೊಂದಿಗೆ-ಹೊಸ ಪ್ರಯೋಗ ಕೂಡ ಅಭಿನಂದನೀಯ. 
ಕಾರ್ಯಕ್ರಮ ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಭಗು ಎಂಬಂತೆ ಹಿರಿ-ಕಿರಿಯರೆಲ್ಲರಿಂದ ಶ್ರೀಮಂತವಾಗಿ , ಅಚ್ಚುಕಟ್ಟಾಗಿ ಮೂಡಿಬಂತು. ಚಿತ್ರರಂಗದ ದಿಗ್ಗಜರಿಗೆ ಸಮ್ಮಾನ ನೀಡಿದ್ದರಿಂದ; ನಮಗೆ ಅವರುಗಳನ್ನ ನೋಡುವ ಸುಸಂಧರ್ಭ ಒದಗಿಬಂತು. ಉಷಾ ಉತ್ತುಪ್ ರ ಹಾಡುಗಳು ಮುದನೀಡಿದವು.ನಾಯಕ-ನಾಯಕಿಯರ ನೃತ್ಯ ಚೆನ್ನಾಗಿತ್ತು. ಸಮಸ್ತ ನಿರ್ಮಾಪಕ ವೃಂದದ ಸಾಹಸ ಮೆಚ್ಚಲೇಬೇಕಾದ್ದು. ಹೊಸ ಪ್ರಯತ್ನವನ್ನು ವೀಕ್ಷಿಸಿ ಪ್ರೋತ್ಸಾಹಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕಿದೆ. 'ಪರಿ' ಚಲನಚಿತ್ರ ಯಶಸ್ವಿಯಾಗಲಿ. 

ಗುರುವಾರ, ಸೆಪ್ಟೆಂಬರ್ 8, 2011

ಪ್ರೀತಿ

ಜೀವನವೆಂಬ ಕಾನನದಲ್ಲಿ 
ಪ್ರೇಮವೊಂದು ಹೂವನ,
ಮೌನವೆಂಬ ಮಾತಿನಲ್ಲಿ
ಪ್ರೀತಿ ನಿತ್ಯ ನೂತನ.

ಕನಸುಗಳ ಜಾತ್ರೆಯಲ್ಲಿ
ಮನಸುಗಳ ತೊಂತನ,
ನೋಟವೆಂಬ ಆಟದಲ್ಲಿ
ಗೆಲುವು ಒಲವ ಕಂಪನ.

ಪ್ರೇಮವೆಂಬ ಭಾವದಲ್ಲಿ
ನೆನಪುಗಳ ನರ್ತನ,
ಪ್ರತಿಯೊಂದು ನೆನಪಿನಲ್ಲಿ
ಪುನಃ ಆವರ್ತನ.

ಹೃದಯವೆಂಬ ಗುಡಿಯಲ್ಲಿ
ಪ್ರೀತಿಯ ನಿತ್ಯಾರ್ಚನ,
ಮನದ ಬನದ ಭಾಷೆಯಲ್ಲಿ
ಪ್ರೀತಿ ದಿವ್ಯ ಚೇತನ.   
  
  
  

ಸೋಮವಾರ, ಸೆಪ್ಟೆಂಬರ್ 5, 2011

ನಿನ್ನಯ ನೆನಪು

ಮಬ್ಬಿನ ಮುಂಜಾವಿಗೆ
ತಂಪೆರೆದು ತಬ್ಬಿದ
ಇಬ್ಬನಿಯ ದಿಬ್ಬಣದಂತೆ
               ಚೆಲುವೆ ನಿನ್ನಯ ನೆನಪು

ನಸುಕಿನ ಮುಸುಕನು
ಸರಸದಿ ಸರಿಸಿದ
ರವಿ ಕಿರಣದಂತೆ
               ಚೆಲುವೆ ನಿನ್ನಯ ನೆನಪು

ಮನವೆಂಬ ಕಣಿವೆಯಲಿ
ಅವಿತಿದ್ದ ಕನಸುಗಳು
ಗರಿಗೆದರಿ ಕುಣಿದಂತೆ
               ಚೆಲುವೆ ನಿನ್ನಯ ನೆನಪು

ಇರುಳಿನ ಕೊರಳಲಿ
ತರಗೆಲೆಯ ಮರೆಯಲಿ
ತೂರಿಬಂದ ಬೆಳೆದಿಂಗಳಂತೆ
               ಚೆಲುವೆ ನಿನ್ನಯ ನೆನಪು

ಮಲೆನಾಡ ಒಡಲಲಿ
ಮಲ್ಲಿಗೆಯ ಮಡಿಲಲಿ
ಒಮ್ಮೆಲೇ  ಘಮ್ಮೆಂದಂತೆ
               ಚೆಲುವೆ ನಿನ್ನಯ ನೆನಪು 


   




ಬುಧವಾರ, ಆಗಸ್ಟ್ 31, 2011

ಎಲ್ಲರಿಗೂ ಚೌತಿ ಹಬ್ಬದ ಶುಭಾಶಯಗಳು.
ಆರು ತಿಂಗಳ ನಂತರ ಮನೆಗೆ ಹೊರಟಿದ್ದೇನೆ, ಊರಲ್ಲಿ ತುಂಬಾ ಮಳೆ.
ಅದರ ಅರ್ಭಟ ನೋಡಿ ಬಂದು ನಿಮ್ಮನ್ನ ಬೆಟ್ಟಿಯಾಗುತ್ತೇನೆ.
ಮನೆಯಲ್ಲಿ ಇರುವ ನನ್ನ ಸಾಹಿತ್ಯ ಸಂಗ್ರಹವನ್ನೆಲ್ಲ ಜೊತೆಗೆ ತರುವ ಯೋಚನೆಯಿದೆ. 

ಪ್ರೀತಿಯಿರಲಿ, ನಿಮ್ಮವ
           -ಪ್ರಸಾದ್ 

ಶನಿವಾರ, ಜುಲೈ 9, 2011

ಹನಿಗಳು

1) ನಿದ್ದೆ.

ಕತ್ತಲ ಚಾದರ
ಹಾಸಿತು ಭಾನು.
ಜಗ ಜಂಜಡವೆಲ್ಲ
ಮರೆತು ಮೆಲ್ಲ
ಮಲುಗಿತು ಭುವಿ.







2) ಪಾಠ.

ಪಾಠ ಮಾಡುತ್ತಿದ್ದ ಮೇಸ್ಟ್ರು
ಜೋರು ದನಿಯಲ್ಲಿ ಹೇಳಿದರು:
"ಕೆಟ್ಟದ್ದನ್ನು ಕೇಳಬಾರದು"
ಅಷ್ಟೇ; ಕ್ಲಾಸು ಖಾಲಿಯಾಯ್ತು!









3) ರಿಯಲ್ ಎಸ್ಟೇಟ್.

ಹೆಸರಿಗೆ ಮಾತ್ರ ರಿಯಲ್
ಈ ಉಧ್ಯಮ ಅದುವೇ;
'ರಿಯಲ್ ಎಸ್ಟೇಟು'
ಮರೆಮಾಚುವಲ್ಲಿ ಯಶಸ್ವಿಯಾಗುತ್ತದೆ
ರಿಯಲ್ ಎಸ್ಟ್-ರೇಟು!







4) ಸಮಾನಾರ್ಥಕ.

ಹೆಂಡತಿ ಪದಕ್ಕೆ
ತಕ್ಕ ಪರ್ಯಾಯ:
'ಮನದನ್ನೇ'
ಫ್ರಿಡ್ಜ್ ತಂದಾಗಿಂದ
ಉಣಬಡಿಸುತ್ತಿದ್ದಾಳೆ
'ಮೊನ್ನೇದನ್ನೇ'!






5) ಕುಂಡಲಿ.

ಜಾತಕ ನೋಡಿದ ಜ್ಯೋತಿಷಿ
ಹುಬ್ಬೇರಿಸಿ ಹೇಳಿದ:
"ನಿನ್ನ ಕೈಲಿ ದುಡ್ಡು -
ತುಂಬಾ ಓಡಾಡತ್ತೆ!"
ಕೂಡ್ಲೇ ಕೆಲ್ಸಾ ಕೂಡ ಸಿಗ್ತು.
ಅವ್ನೀಗ ಸ್ಟೇಟ್ ಬ್ಯಾಂಕ್ ನಲ್ಲಿ
'ಕ್ಯಾಷಿಯರ್ರು'!..





6) ಅಡುಗೆ-ಕೊಡುಗೆ

ಮೈಕ್ರೋ-ವೇವ್ ಓವನ್ನು
ತಂದುಕೊಟ್ಟ ನಂತರ
ಮನೇಲಿ ಎಕ್ಸ್-ಪೆರಿಮೆಂಟು
ಜಾಸ್ತಿಯಾಯ್ತು.
ಬಡಪಾಯಿ ಗಂಡನಿಗೆ
ಹೊಟೆಲ್ ಊಟ
ಖಾತ್ರಿಯಾಯ್ತು!.





7) ಮಾಡೆಲ್

ರ್‍ಯಾಂಪ್ ಮೇಲೆ
ತಳುಕುತ್ತಾ
ಬಳುಕುತ್ತಾ
ನಡೆಯುತ್ತಾಳೆ
ಮಾಡೆಲ್ಲು.
ಮೈತುಂಬಾ ಬಟ್ಟೆ
ಹಾಕಿದ್ರೆ ಮಾತ್ರ
ಅವ್ಳು ಡಲ್ಲು!.

ಶನಿವಾರ, ಜೂನ್ 18, 2011

"ಮಲೆನಾಡ ಮಳೆ"



ಮೊದಲ ಮಳೆಗೆ
ತೋಯ್ದಳು 'ಇಳೆ';
ಇಳೆಯಾದಳು-'ಪರಿಮಳೆ';
ಕಾರಣ ಆ ಪರಿ- 'ಮಳೆ'!.

ಮೋಡ ಮುಸುಕಿದ ದಿನ
ಸೂರ್ಯನದೂ ಸೋಮಾರಿತನ.
ಗುಡುಗಿನದು:  ಆರ್ಭಟ
ಮಳೆ ಬಿಡದು: ತನ್ನ ಹಠ.

ಮಕ್ಕಳಿಗೆ ಶಾಲೆ-ರಜೆಯೆಂಬ ಖುಷಿ
ಹೆಗಡೇರಿಗೊಂದೇ ತಲೆಬಿಸಿ,
ಎಲ್ಲಿ ಬಂದು ಬಿಡತ್ತೋ-
ತಮ್ಮ ತೋಟಕ್ಕೂ 'ಕೊಳೆ'.

ರಸ್ತೆ ಮದ್ಯೆ ಅಲ್ಲಲ್ಲಿ ನಿಲ್ಲಿಸಿದ ನೀರು,
ಕಾರಣ ಮಕ್ಕಳೇ ಕಟ್ಟಿದ ಆಣೆಕಟ್ಟೆ.
ಗಣಿತದ ಪಟ್ಟಿ ಹರಿವ ಮಾಣಿ
ನಿತ್ಯ ತೇಲಿ ಬಿಡುವ- 'ದೋಣಿ'.

ಬೇಡವೆಂದರೂ ಬೆರಳ ಸಂದಿಗೇ
ಹೋಗುತ್ತದೆ ನಿಮ್ಮ ದೃಷ್ಟಿ;
ಕಾರಣ, 'ಇಂಬಳ'ವೆಂಬ
ಮಳೆಗಾಲದ್ದೇ ಅದ್ಭುತ 'ಸೃಷ್ಟಿ!'.

ಓಳಿ ತುಂಬಿದ ಸ್ವಾಣೆ,
ರಾತ್ರಿ ಅರಳುವ ಬ್ರಹ್ಮ ಕಮಲ,
ಮಲೆನಾಡ ಅಂಗಳಕ್ಕೆ-
ತುಂಬಿದ ಪ್ರಾಯ...

ಕೂಸು ಮುಡಿವಳು
ತಲೆತುಂಬುವ ಡೇರೆ.
ಆದರೂ ಅಣ್ಣನ್ನ ಕೇಳ್ತಾಳೆ-
ತಂದುಕೊಡು ಮರವೇರಿ 'ಸೀತಾಳೆ'.

ಹೊಡ್ತ್ಲು ಮೇಲೆ ಹರವಿದ ಕಂಬಳಿ
ಹಲಸಿನ ಬೇಳೆ ಸುಡುವಾಗ ಅಪ್ಪನ ಗೊಣಗಾಟ:
"ಮದ್ದು ಕರಡಿಟ್ಟಿದ್ದಿ....
ಗೌಡ ನಾಳೆ ಆದ್ರೂ ಬತ್ನ ಎಂತದನ!?.

-ಗುರುಪ್ರಸಾದ್ ಹೆಗಡೆ




             

 
 



ಭಾನುವಾರ, ಮೇ 22, 2011

Happy 3rd(ಕ್ಲಾಸ್ )Birth Day!


"ಪೆಟ್ರೋಲ್ ಬೆಲೆ ಜಾಸ್ತಿ ಆದ್ರೆ ಸಾಕು ಮಿಕ್ಕಿದ್ದೆಲ್ಲ ತಾನಾಗೆ ಜಾಸ್ತಿ ಆಗುತ್ತೆ ತಿಳ್ಕೋ ಮನಮೋಹನಾ"
                                                                                                              ....ಹೈಕಮಾಂಡ್!  
"ಇದು 'ಯು.ಪೀ.ಎ' ಪ್ರನಾಳಿಕೆಯೋ?- ಪ್ರಾಣಕ್ಕೇ ಕುಣಿಕೆಯೋ ಗೊತ್ತಾಗ್ತಾ ಇಲ್ಲ"
                                                                                                            .....ಆಮ್ ಆದ್ಮಿ!

ಬುಧವಾರ, ಮೇ 18, 2011

ವಕ್ರತುಂಡೋಕ್ತಿಗಳು

1) ನಾವು ಹೇಗೆ ಯೋಚಿಸುತ್ತೆವೆಯೋ ಹಾಗೆಯೇ ಆಗುತ್ತದೆ ಎಂಬ ಮಾತಿದೆ.
ಹಾಳಾದ್ದು ಈ ಹುಚ್ಚು ಹುಡುಗಿಯರಿಗೆ ಏನು ಅರ್ಥಾನೆ ಆಗಲ್ಲಪ್ಪ.......!

2) ಪ್ರೀತಿ ಮತ್ತು , ಎರಡೂ ಒಂದೇ ನಾಣ್ಯದ ಎರಡು ಮುಖಗಳು.
ಟಾಸ್ ಮಾಡಿ...ಯಾವ್ದು ಬಿದ್ರು ಬ್ಯಾಟಿ0ಗೇ!. 

ಸೋಮವಾರ, ಮೇ 9, 2011

ವಕ್ರತುಂಡೋಕ್ತಿ

1. ಈ ಮದುವೆ ಅನ್ನೋದೊಂಥರ ದೂರ ಪ್ರಯಾಣ;  
    ರಿಟರ್ನ್ ಟಿಕೆಟ್ ಇಲ್ದೆ ರಿಸರ್ವೇಶನ್ ಮಾಡಿಸಿದಂತೆ!   

2. ಹೆಂಡ್ತಿ ಅನ್ನೋವ್ಳನ್ನ ಸೃಷ್ಟಿ ಮಾಡಿದ ಭಗವಂತ ಕೊನೆಗೆ ಹೇಳಿದ್ದಿಷ್ಟು: 
    "ನಾನು ಅನ್ಕೊಂಡಿದ್ದೆ ಒಂದು-ಇವು ಆಗಿದ್ದೇ ಒಂದು"!.

3. ಲವ್ ನಲ್ಲಿ ಇದ್ದಷ್ಟು ದಿನ ನಿಮ್ಮ ನೆರಳು ಕೂಡ ನಿಮ್ಮನ್ನ follow ಮಾಡಲ್ಲ ಕಣ್ರೀ..
    ಕತ್ತಲಲ್ಲಿ ನೆರಳು ಕಾಣೋಲ್ಲ ಅನ್ನೋದು ಕಾಮನ್ ಸೆನ್ಸು, ಇವೆಲ್ಲ ಉಸಾಬರಿ ಬೇಡ ಅಂತ ಸುಮ್ನಿರೋದು ಇಂಟೆಲಿಜೆನ್ಸು!

4. ಪ್ರೀತಿ ಒಂಥರಾ 'ಪೀಸಾ'ದ ವಾಲುಗೋಪುರ ಇದ್ದಂತೆ! ಡಿಫರೆನ್ಸ್ ಏನಪಾಅಂದ್ರೆ ಪೀಸಾ tower -    ಯಾವಾಗ್ಲೂ ವಾಲಿರುತ್ತೆ, ಪ್ರೀತಿ ಹೊಸ ಮಾಡೆಲ್ ಕಂಡಾಗೆಲ್ಲ ವಾಲತ್ತೆ...!  
                   

ಭಾನುವಾರ, ಮೇ 8, 2011

ಕಣ್ಣೀರು

ರಾತ್ರಿಯ ಕಣ್ಣು ಒಂದೇ ಸಮನೆ 
ಅಳುತ್ತಿತ್ತು; ನೀನಿಲ್ಲದೇ....?
ನೀಬಂದೆ, ಅಳು ನಿಂತದ್ದೂ ನಿಜ;
ಕಾರಣ ನೀನಲ್ಲಬಿಡು, 'ನೀರಿಲ್ಲದೇ'!  

ವಕ್ರತುಂಡೋಕ್ತಿ

1. ಜೀವನದಲ್ಲಿ ಇಬ್ರಿಗೆ ಮಾತ್ರ ಯಾವಾಗ್ಲೂ ಸುಳ್ಳೇ ಹೇಳ್ಬೇಕು, ಯಾಕಂದ್ರೆ ಇಬ್ರಿಗೂ ಸತ್ಯ ಅಪಥ್ಯ:
    ಒಂದು: ಪೋಲಿಸ್, ಇನ್ನೊಂದು: ಗರ್ಲ್'ಫ್ರೆಂಡು!

2. ಗರ್ಲ್'ಫ್ರೆಂಡು ಅಂದ್ರೆ ಫೋನ್ ಇದ್ದಂತೆ; ಬಿಲ್ ಯೋಚನೆ ಬಿಟ್ಟು ತುಂಬಾ ಮಾತಾಡ್ಬೇಕಾಗತ್ತೆ!. 
    ಒಂದೇ ಡಿಫರೆನ್ಸ್ ಅಂದ್ರೆ ಇಲ್ಲಿ wrong button ಪ್ರೆಸ್ ಮಾಡಿದ್ರೆ ಕಾಲ್ disconnect ಆಗತ್ತಷ್ಟೇ!.

3. ಕೆಲವು ಗರ್ಲ್'ಫ್ರೆಂಡ್ ಗಳು ಹಾಗೇ ಬಂದು ಹೋಗುತ್ತಾರೆ ಅಷ್ಟೇ, ಆದ್ರೆ ಯಾರು ಕೊನೆವರೆಗೂ ಉಳಿಯುತ್ತಾಳೋ
    ಅವಳು ಏನೋ scheme ಮಾಡಿಕೊಂಡೇ ಬಂದಿದ್ದಾಳೆ ಅಂತ ಅರ್ಥ, ಹಾಗೂ ಅವಳನ್ನ ಹೆಂಡ್ತಿ ಎನ್ನಬಹುದು!.                     
            
ಒಂದಷ್ಟು ಇಂಟರೆಸ್ಟಿಂಗ್ ಸಿಗರೇಟ್ ಉಕ್ತಿಗಳು:



"It is easier to stay out than get out".

"Sooner or later, everyone stops smoking".

"I kissed my first girl and smoked my first cigarette on the same day. I haven’t had time for tobacco since".

"Cigarette: A fire at one end, a fool at the other, and a bit of tobacco in between".

"To the average cigarette smoker the world is his ashtray".

"Cigarettes are killers that travel in packs".

"The best way to stop smoking is to carry wet matches,(Kindly forget lighter)".

"I’m not really a heavy smoker any more. I only get through two lighters a day now".

"I have made it a rule never to smoke more than one cigar at a time".

"If we lose the battle against tobacco, we will lose the war against cancer".

"If I cannot smoke in heaven, then I shall not go".

"The only safer cigarette is your last one".

ಬುಧವಾರ, ಮೇ 4, 2011

ಸಾಧನೆ!

ಮುಂಜಾನೆ ಇದ್ದಕ್ಕಿದ್ದಂತೆ
ಹಾಸಿಗೆಯಿಂದ ಎದ್ದ ಒಬ್ಬ.
ಆಮೇಲೆ ಜ್ಞಾನೋದಯ 
ಆಯ್ತಂತೆ ;
ತುಂಬ ಬೇಗ ಎದ್ದೆ ಅಂತ.
ಚಾದರ ಹೊದ್ದು  
ಮತ್ತೆ ಮಲಗಿದ...! 

ಭಾನುವಾರ, ಮೇ 1, 2011

ಹೀಗೊಂದು ಪ್ರಶ್ನೆ?

ಮೊನ್ನೆ ಹುಟ್ಟಿದಳು
ಒಬ್ಬ ಹುಡುಗಿ;
ಅವಳೀಗ ಬಡವರ
ಮನೆಯ 'ಭಾಗ್ಯಲಕ್ಷ್ಮಿ'.
ಯಡ್ಡಿ ಇಟ್ಟ ದುಡ್ಡು
18 ವರ್ಷಕ್ಕೆ ಮೆಚ್ಯೂರ್
ಆಗುತ್ತದೆ..
ಹುಡುಗಿ 16ಕ್ಕೇ ಓಡಿಹೋದರೆ 
ಆ ದುಡ್ಡು ಏನಾಗುತ್ತದೆ...!!!?    

ಮಂಗಳವಾರ, ಏಪ್ರಿಲ್ 26, 2011

ಹೆಸರು

ಎಂಬ್ರಾಯಡರಿ ಮಾಡುವ 
ಆಂಟೀ ಇಟ್ಟಳು
ಮನೆಗೆ ಹೆಸರು
'ಕಸೂತಿ'...
ಹಾಗಾದರೆ,
ಹೆರಿಗೆ ಡಾಕ್ಟರ್
ಇಡುತ್ತಾರೆಯೇ
ಮನೆಗೆ ಹೆಸರು
'ಪ್ರಸೂತಿ'!?.            

ಕಾರಣ

ಹುಡುಗನ ಮನದಂಗಳದಿ
ರಂಗೋಲೆ ಹಾಕಿದಳು ಹುಡುಗಿ,
ನಂತರ ಇಬ್ರೂ ಸೇರಿ ಅಲ್ಲಿ
ಬಣ್ಣ ಹಾಕಿದರು..
ಆಮೇಲೆ ಗುರು-ಹಿರಿಯರೆಲ್ಲ  
ಸೇರಿ ಮದುವೆ ಮಾಡಿದರು!.

ಬುಧವಾರ, ಏಪ್ರಿಲ್ 20, 2011

ಚುಟುಕು

ಪಯಣ 

ಕತ್ತಲ ಭಯದಿ ಓಡಿ ಹೊರಟರೆ
ಬೆಳದಿಂಗಳೂ ದಾರಿ ತೋರದು,
ಬೆದರಿ-ಬಿಕ್ಕುತ ದಿಕ್ಕು ತಪ್ಪಿದರೆ
ಜೀವನದಿ ಸಾಗರನ ಬಳಿಸೇರದು.

ಗಾಳಿ ಬಂದಾಗ ತೂರಿಕೊಂಡವ  ಮೇಲೇರಿದ
ಮುದುಡಿದವ ಮುಂದೆ ಮರುಗುವ 'ಮೇಲೇರದೆ'!.
ಬರಿ ಕನಸ ಕಂಡವ ಎಣಿಸಿದ- ಹೀಗಾದರೆ..............
ನಿಜವಾದ ಕನಸಿಗ ಮಾಡಿತೋರಿಸಿದ ಬೆರಗಾದಿರೇ.?


ನಗು

ಪ್ರೀತಿಯಾ ಪರಿಗೆ ಮೆಲ್ಲ ಜಾರಿದಾಮುತ್ತು 
ಮುಗ್ದ ಕೆನ್ನೆಯ ಮೇಲೆ ನಲಿದಾಡಿತು.....
ಏನೂ ಅರಿಯದ ಮುದ್ದು ಕಂದಮ್ಮ 
ತಾಯಿ ಪ್ರೀತಿಯ ಸವಿದು ಮೆಲ್ಲ ನಕ್ಕಿತು!    

-ಪ್ರಸಾದ್

    

ಭಾನುವಾರ, ಏಪ್ರಿಲ್ 17, 2011

ಒಂದು ನಿರ್ಧಾರ.

ಹೌದು ನಾನೊಂದು ನಿರ್ಧಾರಕ್ಕೆ ಬಂದಿದೀನಿ; ಇನ್ಮುಂದೆ forward message ಕಳಿಸಬಾರದು  ಅಂತ.
I mean i'll send, but not in a bulk.
ನಿಮ್ಮ ಹತ್ರ ಈ ವಿಚಾರಾನ ಹೇಳ್ಕೊಳ್ಳೋಣ ಅನ್ನಿಸ್ತು ಅದಕ್ಕೆ ಈ ಬರಹ. ರಾತ್ರಿ ಹನ್ನೆರಡು ಗಂಟೆ ಆಗಿದೆ
'madiraasapattinam'(ಮದರಾಸಪಟ್ಟಣಂ) ಫಿಲಂ ನೋಡಿ ಮಲಗಿದ್ದೆ ನಿದ್ದೆ ಬರ್ತಿಲ್ಲಿಲ್ಲ ಅದು ಇನ್ನೊಂದು ಕಾರಣ.
ಇಷ್ಟು ಹೇಳಿದ್ರು ನೀವು ಮುಂದೆ ಓದ್ತಿದೀರ ಅಂದ್ರೆ ಅದು ವಿನಾಕಾರಣ!. ನಿದ್ದೆ ಬಂದಿಲ್ಲಾಂದ್ರೆ carryon...

ಅಂದಹಾಗೆ ಸದ್ಯ ಅಷ್ಟೇ ಸಾಫ್ಟ್ವೇರ್ ಇಂಜಿನಿಯರ್ ಆಗಿದೀನಿ, ಮೊದಲು ಏನ್ಮಾಡ್ತ ಇದ್ದೆ ಅಂತ ಇನ್ನೊಮ್ಮೆ ಬರೀತೀನಿ..
ಅದೊಂದು ಕಥೆ- ಮತ್ತೆ ನಿಮಗೆ ಗೊತ್ತಿಲ್ದೆ ಇರೋ ಹೊಸ ಲೋಕ ಅಂತ ಅಷ್ಟೇ ಸದ್ಯ ಹೇಳಬಲ್ಲೆ.
ಜೀವನದಲ್ಲಿ  ನಾವು ತಗೊಳ್ಲ್ಲೋ ನಿರ್ಧಾರವನ್ನ ದೊಡ್ಡದು, ಸಣ್ಣದು ಅಂತಾ ಎರಡು ರೀತಿ ವಿಭಾಗಿಸೋಣ.
ದೊಡ್ಡ ನಿರ್ಧಾರಗಳಿಗೆ ದೊಡ್ಡ ದೊಡ್ಡ ಕಾರಣಗಳಿರುತ್ತವೆ ಅದಕ್ಕಿಂತ ಹೆಚ್ಚಾಗಿ ಅನಿವಾರ್ಯತೆ ಇರತ್ತೆ leave it. ಯಾಕಂದ್ರೆ ನಾವು ಅಷ್ಟೊಂದು ಯೋಚನೆ ಮಾಡೋಷ್ಟು ದೊಡ್ದೋರಲ್ಲ. ಈ ಚಿಕ್ಕಪುಟ್ಟ ನಿರ್ಧಾರಗಳಿರುತ್ತವಲ್ಲ ಅವುಗಳು
ನಮ್ಮಮೇಲೆ ನಮಗೊಂದು ಹಿಡಿತವನ್ನ ನೀಡುತ್ತವೆ. ಈ ನಿರ್ಧಾರಗಳನ್ನ ತಗೊಂಡಮೇಲೆ ಜಾರಿಗೆ ತರೋದು ಕೂಡ ಸುಲಭ.
ಏನೋ ಮಾಡ್ತಿರ್ತೀರಿ ಇದ್ದಕ್ಕಿದ್ದಂತೆ  ಒಂದು ಯೋಚನೆ ಬರತ್ತೆ-ಅದು ಹಾಗೆ ಮಾಯವಾಗೊದ್ರೊಳಗೆ ಉಪಯೋಗಿಸಿಕೊಳ್ಳಿ
ಅಥವಾ ತಕ್ಷಣಕ್ಕೆ ಜಾರಿಗೆ ತಂದುಬಿಡಿ, ನೆಪ ಬೇಡ -ನಾಳೆಯಿಂದ ಅಂತ ಮಾತ್ರ ಅಂದುಕೊಳ್ಳೋದು ಬೇಡ.

 

ಇಂದಿಗೂ ನನ್ನ ಕೆಲವೊಂದು ಗೆಳೆಯರು ಬಯ್ಕೊತಿರ್ತಾರೆ. ಎಲ್ಲಿದೀಯ ಗುರೂ... ಒಂದ್ call ಇಲ್ಲ, ಮೆಸೇಜ್ ಇಲ್ಲ..
ಮರೆತು ಬಿಟ್ಯಾ ಹೆಂಗೆ..? ಸುಮ್ನೆ ಅವರನ್ನೊಮ್ಮೆ ನೋಡಿ ಇಲ್ಲ್ಲಅಂತೀನಿ, next ಒಂದು ಕಾರಣ ಕೊಡ್ತೀನಿ dats all.
ಆಮೇಲೆ ವಿಷಯ ಚೇಂಜ್ ಮಾಡಿ chapter 'close' ಮಾಡ್ತೀನಿ; try it yourself!. ಯಾಕಂದ್ರೆ ಜೀವನ ಅಂದ್ರೆ forward message ಒಂದೇ ಅಲ್ವಲ್ಲ..its ture story...not a toy story !.

ಚಾಟಿಂಗ್ ಮಾಡಿ ಯಾಕಂದ್ರೆ ಅದರಿಂದ ಕ್ರಿಯೇಟಿವ್ ಆಗ್ತೀರ!, ಅದ್ರಲ್ಲಿರೋ ಪ್ರತೀ ಅಕ್ಷರಾನು ನಿಮ್ಮದೇ ತಾನೇ..
but take control.. ಹುಡ್ಗೀರ್ಗೆ ತುಂಬಾ ಚೆನ್ನಾಗಿ ಮಾತಾಡೋರು/text ಮಾಡೋರು ಬೇಗ ಇಷ್ಟ ಆಗ್ತಾರೆ ಲವ್ವು-ಗಿವ್ವು ಅಂತ ಬೆನ್ನತ್ತಿಬಿಟ್ಟಾರು ಹುಷಾರು!. ನಿರ್ಧಾರ ತಗೊಳ್ಳಿ ಅಂತ ಹೇಳ್ತಿದೀನಿ ಅಷ್ಟೇ ಯಾವ್ದು ಅಂತ ನೀವೇ ನಿರ್ಧರಿಸಿ. ಸುಳ್ಳು ಹೇಳಲ್ಲ ಅಂತ ನಿರ್ಧಾರ ತಗೊಳ್ಳಿ- ಹೇಳ್ಬೇಡಿ ಕೂಡ. ಯಾರಿಗೋ ಬೇಜಾರಾಗತ್ತೆ ಅಂತ ನೀವು ಸುಳ್ಳರಾಗಬೇಕೆಂದೇನು ಇಲ್ವಲ್ಲ. ಇನ್ನೊಂದು ನಿರ್ಧಾರಾನ ನಾನು 9th ಕ್ಲಾಸ್ ನಲ್ಲಿದ್ದಾಗ್ಲೆ ತಗೊಂಡಿದ್ದೆ; ಊಟಕ್ಕೆ ಕುಳಿತೋನು extra ಉಪ್ಪು ತಿನ್ನಲ್ಲಾಂತ,
ನಮ್ಮ ತಾತ ಕೂಡ ತಿಂತಿರಲಿಲ್ಲ ಅವರ ನಂತರ ನಾನು ಶುರುಮಾಡಿದೆ. ತಾತ ಬೆಳಿಗ್ಗೆ ಹಾಸಿಗೆ ಮೇಲೆ ಕೂತಿದ್ದೋರು, ನನ್ನ ಅಮ್ಮನ ಹತ್ರ 'ಬಾಗಿಲು ತೆಗೆದಿಟ್ಟಿರು ಹೊರಗಡೆ ಹೋಗ್ಬೇಕು' ಅಂದ್ರು.
ಅಮ್ಮ ರಂಗೋಲಿ ಹಾಕಿ ವಾಪಸ್ ಬರೋ ಹೊತ್ತಿಗೆ ತುಂಬಾ ದೂರ ಹೋಗಿದ್ರು, ನೆಮ್ಮದಿಯ ಸಾವು ಅಂದ್ರೆ ಅದಲ್ವ 90ನೇ ವಯಸ್ಸಿನಲ್ಲಿ!. ಉಪ್ಪು ಬಿಟ್ಟದ್ದು ತುಂಬಾ ಒಳ್ಳೆ ನಿರ್ಧಾರ ಅಂತ ನಮ್ doctor ಕೂಡ ಹೇಳಿದ್ರು.
ನಂಗೆ ಕೋಪ ಜಾಸ್ತಿ  ಅಂದ್ರೆ ಕೆಲವರು ನಂಬಲ್ಲ, ಆದ್ರೆ ನಿಜ ಉಪ್ಪು ತಿನ್ನ್ನ್ನೋದು ಬಿಟ್ಟ ಮೇಲೆ ಕೊಂಚ ಕಡಿಮೆ ಆಗಿದೆ;
i have experienced it'.

ಮತ್ತೆ ನಮ್ಮ ಮೊದಲಿನ ವಿಚಾರಕ್ಕೆ ಬಂದ್ರೆ ನೀವು ಕಳಿಸಿದ ಮೆಸೇಜ್'ನ ಪರಿಸ್ತಿತಿ ಇನ್ನೊಬ್ರ inbox ನಲ್ಲಿ
ಯಾವ ಥರ ಆಗಿರುತ್ತೆ ಅಂತ ಕಲ್ಪನೆ ಮಾಡ್ಕೊಳ್ಳಿ;
1>ಕೆಲವರ  inbox ತುಂಬಿ ತುಳುಕಾಡ್ತಾ ಇರತ್ತೆ, ನಿಮ್ಮ ಮೆಸೇಜ್'ಗೆ ದಾರಿಮಾಡಿ ಕೊಡೋಷ್ಟು ಪುರುಸೊತ್ತು ಅವ್ರಿಗೆ ಇರಲ್ಲ
2>ಓಹ್ ಹಳೆ ಮೆಸೇಜ್ ಅಂತ ಡಿಲೀಟ್ ಮಾಡ್ತಾರೆ ಇನ್ನು ಕೆಲವರು.
3> ಅಯ್ಯಪ್ಪಾ PJ ಅಂತ ಅನ್ಕೊತಾರೆ ಇನ್ನು ಮಿಕ್ಕಿರೋರು, ಇವೆಲ್ಲ ಬೇಕಾ.....?

ಅದಕ್ಕೆ ಇಂಥ ನಿರ್ಧಾರ ತಗೊಳ್ಳಿ ಅಂತಿಲ್ಲ; ಯಾಕಂದ್ರೆ ಡಿಸೈನ್-ಡಿಸೈನ್ ಆಗಿ ನಿರ್ಧಾರ ತಗೊಳ್ಳೋ ಸ್ವಾತಂತ್ರ್ಯ ನಿಮಗಿದೆ.
ಅದನ್ನ ಬೇರೆ ಯಾರೋ ಹೇಳಬೇಕಾಗಿಲ್ಲ ಅಲ್ವ. ಇನ್ನೊಂದು ವಿಚಾರ ಯಾರಾದ್ರೂ ಪರಿಚಯ ಇರೋರು ಅಥವಾ  ಫ್ರೆಂಡ್ಸ್ ಸಿಕ್ರೆ  ಅವರ ಹತ್ರ ಮಾತಾಡಿ, ತುಂಬಾ ನಗಿ, 'ಜೇಬಲ್ಲಿ ದುಡ್ಡಿದ್ರೆ' ಏನಾದ್ರೂ ಕೊಡ್ಸಿ, ಇಲ್ಲಾಂದ್ರೆ ಅವ್ರ ಹತ್ರಾನೆ ಇಸ್ಕೊಂಡು-ತಿನ್ನಿ ಮಜಾ ಮಾಡಿ!. ಅದನ್ನ ಬಿಟ್ಟು i'll call  you, text you ಅಂತೆಲ್ಲ ಬ್ಯುಸಿ ಇರೋತರ ಕಾಗೆ ಹಾರಿಸೋದು ಚೆನ್ನಾಗಿರಲ್ಲ ಅಲ್ವ.. ತುಂಬಾ ಯೋಚನೆ ಮಾಡದೇ ಆದಷ್ಟು ಬೇಗ ಒಂದು ಒಳ್ಳೇ ನಿರ್ಧಾರಕ್ಕೆ ಬನ್ನಿ.
ಇಷ್ಟು ಓದಿದಮೇಲೆ ಹಲ್ಕಾನನ್ಮಗಾ ಗುರೂ ಇಷ್ಟೊತ್ತು ಸುಮ್ನೆ ಟೈಮ್ ವೇಸ್ಟ್ ಮಾಡ್ಬಿಟ್ಟ ಅಂತ ನಿರ್ಧಾರಕ್ಕೆ ಬಂದ್ರೆ..
ನಾನಂತೂ ಜವಾಬ್ದಾರನಲ್ಲ!
-
ಪ್ರಸಾದ್

ಭಾನುವಾರ, ಮಾರ್ಚ್ 20, 2011

ಮಿನಿ ಕವಿತೆಗಳು

೧) ಮುತ್ತು.

ಮುತ್ತು ಕೊಡೋವಾಗ
ಮೂಗು ಮಧ್ಯೆ ಬರತ್ತಲ್ಲ
ಅಂದುಕೊಂಡಿದ್ದ!
ಆದ್ರೆ.....
ಅಡ್ಡ ಬಂದದ್ದು ಮೂಗಲ್ಲ;
ಹೆಂಡತಿಯ ಮುಂಬಲ್ಲು..

೨) ಸತ್ಯ

ಅಪ್ಪನ ಬಳಿ ಮಗ ಕೇಳಿದ
"ಅಮ್ಮನ್ನ ಮದುವೆಯಾಕಾದೆ?".
ಟೆನ್ಶನ್'ನಲ್ಲಿ ಸತ್ಯ ಹೊರಬಿತ್ತು..
"ನಂಗೂ ಹಾಗೆ ಅನ್ನಿಸ್ತಿದೆ ಮಗು
-ಯಾಕಾದ್ರೂ ಆದೆ!"
   

ಗುರುವಾರ, ಮಾರ್ಚ್ 10, 2011

Software ಪ್ರಸಂಗ

ಹೆಂಡತಿ ನಸುಕಿನಲಿ ಎದ್ದು ನೋಡಿದಾಗ ಗಂಡ ಸಿಟ್ಟಿನಿಂದ ಅಡುಗೆಮನೆಯಲ್ಲಿ ಶತಪತ ಹಾಕುತ್ತಿರುವುದು ಕಾಣಿಸಿತು. 
ಅವನಿಗೆ ಹಸಿವಾಗಿದೆಯೆಂದೂ, ಆತ ಏನೋ ಹುಡುಕುತ್ತಿರುವನೆಂದು ಎಲ್ಲಕ್ಕಿಂತ ಮಿಗಿಲಾಗಿ ಯಾವುದೋ ವಿಚಾರಕ್ಕೆ  ಬೇಜಾರು ಮಾಡಿಕೊಂಡಂತೆಯೂ ಇತ್ತು ಮುಖಬಾವ. ಅಂದಹಾಗೆ ಗಂಡ ಸಾಫ್ಟ್ವೇರ್ ಇಂಜಿನಿಯರ್ ... 

ಹೆಂಡತಿ: ಏನಾಯ್ತು ಡಿಯರ್? ಪ್ರೊಗ್ರಾಮ್(code) ವರ್ಕ್ ಆಗ್ತಾ ಇಲ್ವಾ?. 
ಗಂಡ: ವರ್ಕ್ ಆಗ್ತಾ ಇತ್ತು, ರಾತ್ರಿ ಪೂರ್ತಿ ಕೂತು ಬರೆದೆ ಬೆಳಿಗ್ಗೆವರೆಗೆ, ಕರೆಕ್ಟ್ ಆಗಿ ವರ್ಕ್ ಆಯ್ತು.
ಹೆಂಡತಿ: ಮತ್ತೆ ಏನು ತೊಂದರೆ, ತುಂಬಾ ಬಗ್(Error ) ಇದೆಯಾ ಅದರಲ್ಲಿ ಹಾಗಾದರೆ?. 
ಗಂಡ: ನಾನು ಸ್ಪೆಷಲ್ ಕೇರ್ ತಗೊಂಡು ಬರೆದೆ, ಹೊಸ ಟೆಕ್ನಿಕ್ಸ್ ಬಳಸಿದೆ, ತುಂಬಾ ಚೆನ್ನಾಗಿ ವರ್ಕ್ ಆಯ್ತು. 
ಹೆಂಡತಿ: ಹಾಗಾದ್ರೆ ಇನ್ನೇನ್ರಿ ತೊಂದ್ರೆ?
ಗಂಡ: ನಂಗೆ ತುಂಬ ದಣಿವಾಗಿತ್ತು ಅದಷ್ಟೂ ಮುಗಿಸಿದಮೇಲೆ, ಅಲ್ಲೇ ಕೊಂಚ ನಿದ್ದೆ ಮಾಡಲು ಬಯಸಿದೆ,
5 ನಿಮಿಷಕ್ಕೆ ಅಷ್ಟೇ..
ಹೆಂಡತಿ: ಓಹ್ ಆಯಾಸವಾಗಿದೆಯಾ, ತುಂಬಾ ನಿದ್ದೆಗೆಟ್ಟಿರಿ ಅನ್ನಿಸುತ್ತೆ...ಹೆಂಡತಿ ಉಸುರಿದಳು.
ಗಂಡ: ಇಲ್ಲಾ ಮಾರಾಯ್ತೀ ನಿದ್ದೇನೂ ಮಾಡ್ದೆ, ಆದ್ರೆ ಕೈ ಬ್ಯಾಕ್-ಸ್ಪೇಸ್(ಅಳಿಸುವ) ಕೀ ಮೇಲಿತ್ತು...!!!             
  


  

ಭಾನುವಾರ, ಮಾರ್ಚ್ 6, 2011

ನೆರೆ

ಅರ್ಧ ಕಟ್ಟಿದಂತ ಗೋಡೆ,
ಮಧ್ಯೆ ನಿಂತ ಕಂಬ,
ಮೇಲಿಲ್ಲ ಸೂರು,
ಸುತ್ತಲೂ ನೀರು ..

               ಯಾರೋ ಕಿರುಚಿದ ಸದ್ದು,
               ಎದ್ದು ನೋಡಿದಳು 
               ಮುದ್ದು ಕಂದಮ್ಮ;
               ತೇಲಿಹೋಗಿದ್ದಳು ತಾಯಿ .

ಮಗಳ ಮದುವೆಯ ಹಣ,
ಕೂಡಿಟ್ಟ ಕಾಸು,
ಮೊನ್ನೆ ಕೊಂಡ ಬೈಕು,
ಒಂದೂ ಉಳಿದಿಲ್ಲ
ಕೊನೆಗೆ ಮಗಳೂ..

               ಹದಗೊಳಿಸಿದ್ದ ಹೊಲ
               ಮುಳುಗಿ ಮೆದುವಾಗಿದೆ
               ನಾಡಿಗೆ ಉಣಿಸಿದ-ಕೈ
               ನೆರೆಗೆ ನಲುಗಿದೆ.

ಉಹುಂ, ಒಬ್ಬರೂ 
ಅಳಲೊಲ್ಲರು;
ಇರುವ ನೀರಿಗೆ 
ಕಣ್ಣ ಹನಿಗಳು ಸೇರಿ 
ಎಲ್ಲಿ ದುಮ್ಮಿಕ್ಕುವುದೋ 
ಎಂಬ ಭಯ !..

               ಕಟ್ಟಿ ನಿಲ್ಲಿಸಿದ 
               ಮನೆಯ ಬಿಟ್ಟು,
               ಉಟ್ಟ ಬಟ್ಟೆಯಲಿ ಹೊರಟವಗೆ,
               ಬದುಕ ಕಟ್ಟುವ ಆಸೆ!..


(ಸಂದರ್ಭ- ಹಿಂದಿನ ವರ್ಷ ಕರ್ನಾಟಕ ನೆರೆಹಾವಳಿಗೆ ಒಳಗಾದಾಗ ಬರೆದ ಕವನವಿದು)
ಅಂದಹಾಗೆ ಶಿರಸಿ ವೆಬ್ಸೈಟ್ ನಲ್ಲಿ ಕೂಡ ಈ ಕವನ ಲಭ್ಯ- 

http://sirsi.in/kannada/index.php?option=com_content&view=category&layout=blog&id=38&Itemid=66&limitstart=20

ಪ್ರೀತಿಯಾ ದೋಣಿ

ನನ್ನ ಹೃದಯವೊಂದು ಹಾಯಿದೋಣಿ -ಅದು-
ತಲುಪಬೇಕಿರುವ ಗಮ್ಯ ಕಂಡರೂ-ಕಾಣದಂತಿದೆ.
ಕಡಲಬ್ಬರದಾ ಮೊರೆತ ಮರೆಸೀತೆ ಹೃದಯ ಬಡಿತ 
ಹುಚ್ಚು ಮನಸಿದು, ಬಿಡದು ನಿನ್ನೆಡೆಗಿನಾ ತುಡಿತ!!!

ಒಲುಮೆಯ ಒಡತಿ ಬಂದುಬಿಡು ಮೆಲ್ಲ ನಾನಿದ್ದಲ್ಲಿಗೆ
ಕಡಲ ಕಿನಾರೆಯಲಿ ಕಾಣದೇನೆ ನಾ ಚೆಲ್ಲಿರುವ ಮಲ್ಲಿಗೆ?.
ನಲ್ಲೆ ನೀನು ಮೆಲ್ಲ ಬಂದು ಏರು ಪ್ರೀತಿಯಾ ದೋಣಿ 
ಸುಖಸಾಗರ ದಾಟಿ ಸೇರೋಣ ನಾವು ಪ್ರೇಮ ಪರ್ವತಶ್ರೇಣಿ.


ಶನಿವಾರ, ಮಾರ್ಚ್ 5, 2011

ಜೂಟ್ ಬೋಲತೀ ಹೇ ಸಾಲಿ 'ಆಮ್ ಆದಮೀ ಕಾ ಸರ್ಕಾರ್ ಹೇ!!!



'ಯೇ ಆಮ್ ಆದ್ಮಿ ಕಾ ಸರ್ಕಾರ್ ಹೇ'  ಎಂದೇ ಶುರುವಾಗುತ್ತದೆ ಈಕೆಯ ( ಕೈ-ಹೈಕಮಾಂಡ್) ಮಾತು. ನೆರೆದಿರುವ ಮುಗ್ದ  ಜನರತ್ತ ಕೈ ಬೀಸಿ ಈಕೆ ಹೆಜ್ಜೆ ಕೀಳುತ್ತಿದ್ದರೆ ಜನ ಮರುಳೋ - ಜಾತ್ರೆ ಮರುಳೋ
ಎಂಬಂತಿರುತ್ತದೆ  ಸನ್ನಿವೇಶ. ಬೆಲೆಯೇರಿಕೆಯ ಗದ್ದಲ ಎದ್ದಿರುವ ಸಂದರ್ಭ ನೆನಪಾದದ್ದು ಈಕೆಯ  'ಆಮ್  ಆದ್ಮಿ  ಘೋಷಣೆ !'.
ಈಗ ಮೂರು ವರ್ಷ ಹಿಂದೆ ಇದ್ದ ಬೆಲೆಗೂ ಈಗಿನ ಬೆಲೆಗೂ ತುಲನೆ ಮಾಡಿ ನೋಡಿ. ಹುಷಾರು ಹೈ _ಬೀಪಿ,  ದುರ್ಬಲ ಹ್ರದಯದವರು ಈ ಸಾಹಸಕ್ಕೆ ಕೈ ಹಾಕಬೇಡಿ!!. ಅರೆ ಇದೇನಿದು ನೀವುಕೂಡ ಹೌಹಾರಿದಿರಾ?.
-ಇರಲಿಕ್ಕಿಲ್ಲ ಯಾಕಂದ್ರೆ ಯು.ಪಿ.ಎ  ಸರ್ಕಾರ ಸಾಕಷ್ಟು ಬಾರಿ ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡಿದೆ; ಅಚ್ಚರಿಯಿನ್ನೆಲ್ಲಿಂದ!.
 ಬಾಯಲ್ಲಿ ಬೆಣ್ಣೆ ಬಗಲಲ್ಲಿ ದೊಣ್ಣೆ!. ಅಷ್ಟೇ ಕಣ್ರೀ.

ಇಲ್ಲಿ ಸರ್ಕಾರ ರಚನೆಯಾಗುವುದು ಹೇಗೆ ಎಂಬ ಕಡೆ ಒಮ್ಮೆ ಗಮನಿಸುವ ಅಗತ್ಯವಿದೆ; ಒಂದಿಷ್ಟು ಮತ(ವೋಟು),  ಇನ್ನೊಂದಿಷ್ಟು ಸ್ವಂತ ಲಾಭಕ್ಕೆ ತಮ್ಮನ್ನು ಮಾರಿಕೊಳ್ಳಲು ರೆಡಿ ಇರುವ ಚಿಲ್ಲರೆ ಪಕ್ಷಗಳ ಬೆಂಬಲವಿದ್ದರೆ ಸಾಕು, ಇಲ್ಲಿ ದೊಡ್ಡ ಗಾತ್ರದ ಕತ್ತೆ ಕೂಡ ಸರ್ಕಾರ ರಚನೆ ಮಾಡಿ ಆಡಳಿತ  ನಡೆಸ ಬಹುದಾದ ಪರಿಸ್ಥಿತಿ  ಇದೆ.....!.
ಅದಕ್ಕೇ ಸ್ವಾತಂತ್ರ್ಯಾನಂತರ ದೇಶವನ್ನ ಆಳಿದ ಪಟಾಲಂ ಇಂದು ಕೂಡ ಅಧಿಕಾರದಲ್ಲಿರುವುದು, ಜನತೆಯ ಮೇಲೆ ತೆರಿಗೆಯ
ದುಬಾರಿ ಬರೆಯನ್ನು ಹಾಕುತ್ತಿರುವುದು.  ಎಲ್ಲಿಯವರೆಗೆ ಈ ಸರ್ಕಾರವಿರುತ್ತದೆಯೋ ಅಲ್ಲಿಯವರೆಗೆ ಆಮ್ ಆದ್ಮಿ  ಹಾಗೆಯೆ
ಇರುತ್ತಾನೆ ಹಾಗು ಆತ ವೋಟ್ ಬ್ಯಾಂಕ್  ರಾಜಕಾರಣಕ್ಕೆ ಬಲಿಯಾಗುತ್ತಾನೆ. ಮತ್ತದೇ ಆಮ್ ಆದ್ಮಿ ಗೋಷಣೆ;
ಆಮ್ ಆದ್ಮಿ ಸರ್ಕಾರ. ಹೇಗಿದೆ ಭಾರತದ ರಾಷ್ಟೀಯ ಪಕ್ಷವೊಂದರ ರೆಗ್ಯುಲರ್ ಗುಪ್ತ್-ಗುಪ್ತ್  ಪ್ರನಾಳಿಕೆ !?.
ಚುನಾವಣೆಗೆ ಮುಂಚೆ ತೋರಿಸಿದ್ದ ಪ್ರನಾಳಿಕೆ ಬೇರೆಯದೇ ಇರತ್ತೆ ಬಿಡಿ !!!,

ಒಂದು ಉದಾಹರಣೆ: ೩ರೂಪಾಯಿಗೆ ಕೆಜಿ ಅಕ್ಕಿ; ಅಬ್ಬಾ ಎಂಥ ಯೋಜನೆ ಸರ್ಕಾರದಿಂದ ಅನ್ನಿಸಬಹುದು -ಅದನ್ನ ಪಡೆಯುವವರು ಈ ಸರ್ಕಾರವೇ 'ಬಡತನ-ರೇಖೆ' ಎಂದು ಎಳೆದಿರುವ ಗೆರೆಗಿಂತ ಕೆಳಗಿರುವವರು .
ಈ ಗೆರೆಯ ಕೆಳಗಿರುವವರಿಗಿಂತ ದಿನನಿತ್ಯದ ಬೇಕು ಬೇಡಗಳಿಗೆ ಬಡಿದಾಡುವ, ಮುಂದಿನ ಖರ್ಚಿಗೆಂದು ಇಂದು  ಹೊಟ್ಟೆ -ಬಟ್ಟೆ ಕಟ್ಟಿ ಕೂಡಿಡುವ ದೊಡ್ಡ ವರ್ಗವಿದೆಯಲ್ಲ ಅವರಿಗೇನು ಮಾಡಿದೆ ಸರ್ಕಾರ, ಬಹುಶಃ ಅವರನ್ನೆಲ್ಲ ಅಮೀರ್ (ಶ್ರೀಮಂತ )ಅಂದುಕೊಂಡಿರಲಿಕ್ಕೆ ಸಾಕು ಅಥವಾ ಅವರು ಹೇಗೋ ಜೀವನ ನಡೆಸುತ್ತಾರೆಂಬ ತಾತ್ಸಾರವೇ?. ಮಧ್ಯಮ ವರ್ಗ ಯಾವತ್ತು
ನಮಗೆ ಈ ಸೌಕರ್ಯ ಕೊಡಿ ಎಂದು ದುಂಬಾಲು ಬಿದ್ದಿಲ್ಲ, ಅದು ವ್ಯವಸ್ಥೆಗೆ ಅನುಗುಣವಾಗಿ ತಮ್ಮ ಪಾಡಿಗೆ ತಾನು ಜೀವನ
ಸಾಗಿಸುತ್ತಲಿದೆ: ಎಂದಿನಂತೆ!.

ಗಾಂಧೀ ತತ್ವಗಳು, ಸ್ವಾತಂತ್ರ್ಯಹೋರಾಟಗಾರರ ಹಿನ್ನೆಲೆ ಇವೆಲ್ಲ ಇಂದು ದೇಶ ಆಳುತ್ತಿರುವ ಪಕ್ಷವೊಂದರ ಜಾಹೀರಾತಿನ
ಸರಕಾಗಿರುವುದು ನಮ್ಮದೌರ್ಭಾಗ್ಯ. ಈಬಗ್ಗೆ ಅನುಮಾನಗಳಿದ್ದರೆ ನಮ್ಮೊಂದಿಗಿರುವ ಸ್ವಾತಂತ್ರ್ಯಹೋರಾಟಗಾರರನ್ನೊಮ್ಮೆ
ಮಾತನಾಡಿಸಿ, ಅವರ ನೋವು ಮನಕಲಕುವಂತದ್ದು. ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ವೋಟ್ ಬ್ಯಾಂಕ್ ಎಂಬ ಕೆಟ್ಟ
ಸಂಪ್ರದಾಯ ಎಲ್ಲ ಪಕ್ಷಗಳನ್ನು ತಟ್ಟಿದ್ದರೂ, ಅದನ್ನ ಬೆಳೆಸುತ್ತಿರುವುದು ಈ ದೊಡ್ಡ  ಪಕ್ಷವೇ . ಅದಕ್ಕೆಲ್ಲ ಸಾಕ್ಷಿಯೆಂಬಂತೆ
ಇರುವುದು ಮೀಸಲು ಸೌಕರ್ಯ, ಎಂದಿಗೋ ಕೊನೆಯಾಗಬೇಕಿದ್ದ ಮೀಸಲಾತಿ ಸೌಲಬ್ಯ ಈಗ ಅದನ್ನ ಪಡೆಯುತ್ತಿರುವವರ
ಒಲೈಕೆಗೊಸ್ಕರ ಇನ್ನೂ ಜೀವಂತವಾಗಿದೆ. ಬಹುಶಃ ಮುಂದೆ ಬರುವ ಸರ್ಕಾರಗಳು ಕೂಡ ಅದಕ್ಕೆ ಮುಕ್ತಿ ಕಾಣಿಸುವ ಧೈರ್ಯ
ತೋರಿಸಲಾರವು, ವೋಟ್-ಬ್ಯಾಂಕ್ ಎಲ್ಲಿ  ಕೈ ತಪ್ಪೀತೆಂಬ ಭಯವೇ ಇಷ್ಟಕ್ಕೆಲ್ಲ ಕಾರಣ!.
ಜಾತಿವಾರು ವೋಟ್-ಬ್ಯಾಂಕ್ ಸೃಷ್ಟಿ ಮಾಡಿಕೊಂಡು ಇವತ್ತಿಗೂ ಪೋಷಣೆ ಮಾಡಿಕೊಂಡು ಬರುತ್ತಿರುವ ಈ ರಾಜಕೀಯ ಪಕ್ಷಗಳಿಗೆ  ಎಂದು  ಬುದ್ದಿಬರುವುದೋ?.

ನೋಡುಗರ ದೃಷ್ಟಿಯಲ್ಲಿ ಒಳ್ಳೆಯವರೆನಿಸಿಕೊಂಡ  ಒಂದಷ್ಟು ಜನರನ್ನ ಎದುರಿಗೆ ಇಟ್ಟುಕೊಂಡಿರುವ 'ಹಸ್ತ' ಮಾರ್ಕಿನ
ಹೈಕಮಾಂಡ್''ನ ಜಾಣತನ ಮೆಚ್ಚಲೇಬೇಕಾದ್ದು. ಏನು ಅರಿಯದಂತಿರುವ ಪ್ರಧಾನಿ, ಕೊಂಚ ಇಮೇಜ್ ಇರುವ(?)
ಗೃಹಮಂತ್ರಿ ಇವರೆಲ್ಲ ಎದುರಿಗಷ್ಟೇ; ನಿಜವಾದ ರಾಜಕಿಯ ನಡೆಸುತ್ತಿರುವುದು ಹೈಕಮಾಂಡ್ ಎಂಬುದೇನು ಗುಟ್ಟಾಗಿ ಉಳಿದಿಲ್ಲ!.
ಇನ್ನುಳಿದಿರುವ ನಾಯಕರುಗಳೂ ಅಷ್ಟೇ ಎಲ್ಲರೂ ಈಕೆಯ ಆಣತಿಗೆ ತಲೆದೂಗುವ ತೊಗಲು ಬೊಂಬೆಗಳೇ. 
ಅಧಿಕಾರದ ಆಸೆಯಿಂದ ಮಾತು ಮಾತಿಗೂ ಹೈಕಮಾಂಡ್ ಕಡೆ ಮುಖ ಮಾಡುವಲ್ಲಿ ನಮ್ಮ ರಾಜ್ಯದ 'ಕೈ' ನಾಯಕರು
ಸಿದ್ದ'ಹಸ್ತ'ರು.

ಊಟದ ಅಕ್ಕಿಯಬೇಲೆಯೇ ಗಗನಕ್ಕೆರಿರುವಾಗ ಅತ್ತ ಕಡೆಗೆ ಕೊಂಚ ಗಮನಹರಿಸಬೇಕಾದ ತುರ್ತು ಜನರ ಎದುರಿಗಿದೆ.
ಇವೆಲ್ಲದರ ನಡುವೆಯೇ ಅಡುಗೆ ಅನಿಲದ ಬೆಲೆ ಮೇಲಿಂದ ಮೇಲೆ ಏರಿಕೆಯಾಗುತ್ತಲೇ ಇದೆ. ಇಂದು ಜನ ಸಾಮಾನ್ಯರ
ಮನೆಯಲ್ಲಿ ಕೂಡ ಅಡುಗೆ ಬೇಯುತ್ತಿರುವುದು ಕೂಡ ಎಲ್ .ಪಿ .ಜಿ ಯಿಂದ. ಪರಿಸ್ಥಿತಿ ಹೀಗಿರುವಾಗ ಪದೇ-ಪದೇ
ಬೆಲೆಯೇರಿಕೆಯ ಬರೆಯನ್ನ ಹಾಕುತ್ತಿರುವುದು ಎಷ್ಟು ಸೈ? ಹೈಕಮಾಂಡ್!..  ಇವೆಲ್ಲ ರಾಷ್ಟ್ರ-ಮಟ್ಟದಲ್ಲಿ ನಡೆವ
ಲಾಬಿಗಳಾದ್ದರಿಂದ ಈ ಕುರಿತು ಹೇಗೆಲ್ಲ ಕೇಳುತ್ತ ಇರುವುದು  ತಪ್ಪು-ತಪ್ಪು !.

ಆದರೂ ಹೀಗೊಂದು ಮೆಸ್ಸೇಜು ಇನ್ -ಬಾಕ್ಸ್ ಸೇರಿದಾಗ ಎಂಥವನಿಗಾದರೂ ಒಮ್ಮೆ ತಲೆ ಕೆಡುತ್ತದೆಯಲ್ಲವೇ?-

ಪೆಟ್ರೋಲ್ ಬೆಲೆ ಕೆಳಕಂಡ ದೇಶಗಳಲ್ಲಿ;
ಬಾಂಗ್ಲಾ :22,
ಕ್ಯೂಬಾ  :19,
ನೇಪಾಳ :34,
ಕತಾರ್ : 30,
ಪಾಕ್ :26 ,
ಭಾರತ :53....
ಮೂಲ ಬೆಲೆ ಪ್ರತಿ ಲೀಟರ್ 'ಗೆ - 16.50, ಕೆಂದ್ರ ತೆರಿಗೆ-11.80, ಅಬಕಾರಿ ಸುಂಕ-9.45, ರಾಜ್ಯತೆರಿಗೆ -8.00, ವ್ಯಾಟ್ -4,
ಒಟ್ಟು :50.50....ಈಗ 3 ರುಪಾಯಿ ಹೆಚ್ಚಳ_ಜನ ಮೆಚ್ಚುವ ಕೆಲಸ ಬಾರತ ಸರ್ಕಾರದಿಂದ!.
'ಅಂದಹಾಗೆ ಇದು ವರ್ಷದ ಹಿಂದಿನ ಹಳೆಯ ಮೆಸೇಜು, ಆಮೇಲೆ ಅದೆಷ್ಟು ಬಾರಿ ಏರಿಕೆಯಾಗಿದೆಯೋ ಬಗವಂತ ಬಲ್ಲ!'.
ಈ ರೀತಿಯಾಗಿ ಸಾಗುತ್ತದೆ ಆ ಮೆಸೇಜಿನ ದಾಟಿ. ಇಲ್ಲಿ ನೀಡಿರುವ ಅಂಕಿ ಅಂಶಗಳು ಸರಿಯಗಿವೆಯೋ ಏನೋ ಗೊತ್ತಿಲ್ಲ, ಆದರೆ ತುಂಬಾ ಜನರ ಇನ್-ಬಾಕ್ಸ್ ಅಂತು ತಲುಪಿದೆ. 

ತೊಗರಿ ಬೆಲೆ ತೊಂಬತ್ತು ತಲುಪಿ ಒಂಬತ್ತು ತಿಂಗಳಾಯ್ತು , ಆಮೇಲೆ ನೂರಾಯ್ತು ಈಗ ಎಷ್ಟಿದೆ ಎಂದು ಒಮ್ಮೆ ತಲೆ 
ಕೆಡಿಸಿಕೊಳ್ಳುತ್ತೇವೆಯಾದರೂ ಆಮೇಲೆ ಸುಮ್ಮನಾಗಿಬಿಡುವುದು ನಮ್ಮ ಜಾಯಮಾನ.
ಯಾಕಂದರೆ ಪಕ್ಕದ ಮನೆಯಲ್ಲಿ ಬೇಯುತ್ತಿರುವುದು ಕೂಡ ಅಷ್ಟೇ ರೊಕ್ಕ ಕೊಟ್ಟಿರುವ ಬೇಳೆ ತಾನೇ!!.

ಇತಿಪಂಚ್: ತೀರ ತಿನ್ನುವ ವಸ್ತುಗಳ ಬೆಲೆ ಹೆಚ್ಚಳಮಾಡಿ ಆಮ್ ಆದ್ಮಿಗಳ ಸಂಖ್ಯೆಯನ್ನ ಜಾಸ್ತಿಮಾಡುತ್ತಿರುವುದೇ
(ಕಾಣದ ಕೈ!) ಸರ್ಕಾರದ ಸಾದನೆ ಅನ್ನೋಣ ಅಲ್ಲವೇ!?.

ಏನಂತೀರಿ?


ಈ ಲೇಖನ ಶಿರಸಿಯ ವೆಬ್ಸೈಟ್ ನಲ್ಲಿ ಪ್ರಕಟಗೊಂಡಿದೆ-ಲಿಂಕ್ ಈ ಕೆಳಗಿನಂತಿದೆ ಬೆಟ್ಟಿ ಕೊಡಬಹುದು http://sirsi.in/kannada/index.php?option=com_content&view=category&layout=blog&id=37&Itemid=54

ಶುಕ್ರವಾರ, ಮಾರ್ಚ್ 4, 2011

ಹನಿಗವಿತೆಗಳು

ಹನಿಗವಿತೆಗಳು/ಹೈಕುಗಳು

1)ಪಾರು

ಕೈಯ ಕೊಟ್ಟಳು ಹುಡುಗಿ
ಕಂಗೆಟ್ಟ  ಹುಡುಗ,
ಅಯ್ಯೋ ಎಲ್ಲ ಮುಗಿದೇ
ಹೋಯಿತೆಂದರು ಜನ.
ಅಸಲಿಗೆ ಹುಡುಗ ಬಚಾವಾಗಿದ್ದ!

2)ಜೀವ

ಅಕ್ವೆರಿಯಮ್ಮಿನಿಂದ
ಚಿಮ್ಮಿದ  ಮೀನು
ಹೊರಗೆ ಏನು ಇಲ್ಲವೆಂಬ
ಸತ್ಯವ ಅರಿತು
ಮತ್ತೆ ನೀರಿಗೆ ಹಾರಿತು!

3)ಸೌಂದರ್ಯ ಪ್ರಜ್ಞೆ

ಬ್ಯೂಟಿ - ಪಾರ್ಲರಿನಿಂದ 
ಬಂದ ಬೆಡಗಿಯ
ಕೈಯ ಹಿಡಿದು
ಮೊಮ್ಮಗ
ಮನೆಗೆ ಕರೆದೊಯ್ದ!

4)ಗಡಿಯಾರ

ವರ್ಷಗಟ್ಟಲೆ  ತಿರುಗಿತು
ಗಡಿಯಾರದ ಮುಳ್ಳು,
ಎಷ್ಟು ಸುತ್ತಿದರೂ
ತಲುಪಿದ್ದು ಮೊದಲಿದ್ದಲ್ಲಿಗೇ
ಎನಿಸಿರಬೇಕು ಪಾಪ!...
ಸ್ತಬ್ಧವಾಯಿತು!

ಈ ಕವನಗಳು ಶಿರಸಿಯ ವೆಬ್ಸೈಟ್ ನಲ್ಲಿ ಕೂಡ ಪ್ರಕಟಗೊಂಡಿವೆ-
ಲಿಂಕ್ ಈ ಕೆಳಗಿನಂತಿದೆ ಬೆಟ್ಟಿ ಕೊಡಬಹುದು -

http://sirsi.in/kannada/index.php?option=com_content&view=article&id=250:2011-03-06-12-10-17&catid=38:blog2&Itemid=66